ಸೆಸ್ಪನ್ಸ್, ಥ್ರಿಲ್ಲರ್ ಕತೆಯುಳ್ಳ ಬ್ರಾಹ್ಮೀ ಚಿತ್ರವು ಆಯುಧಪೂಜ ದಿನದಂದು ಸಹಕಾರ ನಗರದಲ್ಲಿರುವ ಬಲಮುರಿ ಗಣಪತಿ ದೇವಾಲಯದಲ್ಲಿ ಸೆಟ್ಟೇರಿತು. ಬ್ರಾಹ್ಮೀ ಮಹೂರ್ತವೆಂದರೆ ಒಳ್ಳೆ ಕಾಲವೆಂದು ಹೇಳುವುದು ಉಂಟು. ಇದರ ಪ್ರೇರಣೆಯಿಂದ ನಿರ್ದೇಶಕರು ಇದೇ ಹೆಸರನ್ನು ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಇದನ್ನು ಅಮೃತಕ್ಕೆ ಹೋಲಿಸುತ್ತಾರೆ. ಮೂಲತಃ ಜಾಹಿರಾತುಗಳಿಗೆ ಸಂಕಲನ ಕೆಲಸ ಮಾಡುತ್ತಾ, ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ಅನುಭವ ಪಡೆದುಕೊಂಡಿರುವ ಬಾಗಲಕೋಟೆಯ ಬಸವರಾಜು ಸರಿ ಸುಮಾರು ಮೂರು ಸಾವಿರ ವರ್ಷಗಳ ಪುರಾಣದ ಮಾಹಿತಿಗಳನ್ನು ಕಲೆಹಾಕಿ ಅದಕ್ಕೆ ಭೂಗತಲೋಕದ ಸ್ಪರ್ಶ ನೀಡಿ ಕಾಲ್ಪನಿಕ ಕತೆ ಹೆಣೆದು ಮೊದಲ ಬಾರಿ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಕಲನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಎರಡು ಹಾಡುಗಳಿಗೆ ಸಂಗೀತ ನಿರ್ದೇಶಕರು ಆಯ್ಕೆಯಾಗಬೇಕಿದೆ. ಚೇತನ್ ಛಾಯಗ್ರಹಣ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಕ್ಲೈಮ್ಯಕ್ಸ್ನಲ್ಲಿ ಸಮರ್ಥವಾದ ಸಂದೇಶವನ್ನು ಹೇಳುವ ಪ್ರಯತ್ನ ಮಾಡುತ್ತಾರಂತೆ.
ಬಾಂಬೆ, ಚೆನ್ನೈ, ಬೆಂಗಳೂರು, ವೈಜಾಕ್, ಬಿಜಾಪುರದಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿರುವ ಶಿಡ್ಲಘಟ್ಟದ ಸೋಹಾನ್ ಅಭಿರಾಮ್ ಭೂಗತಲೋಕದ ದೊರೆಗೆ ಸಹಾಯಕನಾಗಿ ಮುಂದೆ ತಾನೇ ಆ ಸ್ಥಾನಕ್ಕೆ ಬರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಇವರಿಗಿದು ಪ್ರಥಮ ಅನುಭವ. ಕೀರ್ತನಾ ಪೊಡ್ವಾಲ್ ನಗರದ ಗಟ್ಟಿಗಾತಿ ಹುಡುಗಿಯಾಗಿ ಮೂರನೆ ಬಾರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಸತ್ಯಪ್ರಕಾಶ್, ಶೋಭರಾಜ್ ಮುಂತಾದವರು ಇದ್ದಾರೆ. ಬಾಗಲಕೋಟೆಯಲ್ಲಿ ಎಕ್ಸ್ಪೋರ್ಟ್ ವ್ಯಾಪಾರಿಯಾಗಿರುವ ಉಮೇಶ್. ಎಲ್.ಧರ್ಮಶಿ ನಿರ್ಮಾಪಕರಾಗಿ ಚಿತ್ರಕ್ಕೆ ಎರಡೂವರೆ ಕೋಟಿ ಹೂಡಲು ಸಿದ್ದರಿದ್ದಾರೆ. ನಾಗೇಶ್ಗೌಡ ಪಾಲುದಾರರು. ಕೋಲಾರ ಲೋಕಸಭಾ ಸದಸ್ಯ ಮುನಿಯಪ್ಪ, ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಮತ್ತು ಚಿತ್ರರಂಗದ ಗಣ್ಯರು ಮಹೂರ್ತ ಸಮಾರಂಭಕ್ಕೆ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.